ಬೆಳಗಾವಿ.ರಾಯಬಾಗ:* ಕಳೆದ ಆಗಸ್ಟ್ ಮಾಸಾಂತ್ಯದಲ್ಲಿ ಜರುಗಿದ ನಿರೂಪಣಾ ಕೌಶಲ್ಯಾಭಿವೃದ್ಧಿ ಕಮ್ಮಟ ರಾಯಬಾಗ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ತಾಲ್ಲೂಕಿನ ಹಾರೂಗೇರಿ ಪಟ್ಟಣದ ಎಸ್.ಪಿ.ಎಂ.ಬಿ.ಎಡ್.ಕಾಲೇಜಿನಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿತು.
ಸೂಕ್ತ 5 ನಿರೂಪಣಾ ಅಂಗಗಳನ್ನಾಗಿ ವರ್ಗೀಕರಿಸಿ ನುರಿತ ಸಂಪನ್ಮೂಲ ವ್ಯಕ್ತಿಗಳು,ಸಮರ್ಥ ಮಾರ್ಗದರ್ಶಕರಿಂದ ಕಮ್ಮಟದ ಮುನ್ನಾ ದಿನದಂದು ತರಬೇತಿ ಪಡೆದು ಪಾಲ್ಗೊಂಡಿದ್ದ ಹಲವು ಶಿಬಿರಾರ್ಥಿಗಳು ಅಗಸ್ಟ್ 27 ರಂದು ಪ್ರಾತ್ಯಕ್ಷಿಕೆಯ ಮೂಲಕ ಕಲ್ಪನೆ ಮಾಡಿಕೊಂಡು ನಿರೂಪಣಾ ಕಾರ್ಯಕ್ರಮ ಮಾಡುವ ಮೂಲಕ ಸಂಭ್ರಮಿಸಿದರು.
ಬೆಳಿಗ್ಗೆ ನಿರೂಪಣಾ ಕಮ್ಮಟ ಉದ್ಘಾಟನೆ ನೆರವೇರಿದ ನಂತರ ಪ್ರಾತ್ಯಕ್ಷಿಕೆ ಆರಂಭಗೊಂಡಿತು.
ಗೋಷ್ಠಿ 1 ರಲ್ಲಿ “ಕಲೆ ಸಾಹಿತ್ಯ ಮತ್ತು ಸಂಸ್ಕೃತಿಯ ಪ್ರಾತ್ಯಕ್ಷಿಕೆ ಯಲ್ಲಿ ಪಟ್ಟಣದ ಚಿಕ್ಕ ಮಕ್ಕಳ ವೈದ್ಯರಾದ ಡಾ.ನಂದಿತಾ ಒಡೆಯರ ದಿಗ್ದರ್ಶಕರಾಗಿದ್ದರು..ವಿ.ಬಿ.ಜೋಡಟ್ಟಿ, ಶ್ರೀಮತಿ ವಾಣಿ ಚೌಗಲಾ, ವಿಠ್ಠಲ ತೇರದಾಳೆ ಅವರ ಮಾರ್ಗದರ್ಶನದಲ್ಲಿ ಶಿಬಿರಾರ್ಥಿಗಳು ಅತ್ಯಂತ ಉತ್ಸಾಹ ಹಾಗೂ ನಿಷ್ಠೆಯಿಂದ ಪಾಲ್ಗೊಂಡು ಸೊಗಸಾಗಿ ಕಾರ್ಯಕ್ರಮ ಪ್ರಸ್ತುತಪಡಿಸಿ ಪ್ರೇಕ್ಷಕರ ಮನ ಆಕರ್ಷಿಸಿದರು.
ಗೋಷ್ಠಿ 2 ರಲ್ಲಿ “ಧಾರ್ಮಿಕ ಕಾರ್ಯಕ್ರಮ” ದಿಗ್ದರ್ಶಕರಾಗಿ ಸ್ಥಳೀಯ ಬ್ರಹ್ಮಕುಮಾರಿ ಶಿವಾನಿ ಅಕ್ಕ ಅವರು ಉಪಸ್ಥಿತರಿದ್ದರು. ಅದಿನಾಥ ಹಳ್ಳೂರ ಹಾಗೂ ಎಂ.ಎಸ್.ಬಳವಾಡ ಅವರ ಮಾರ್ಗದರ್ಶನದಲ್ಲಿ ಶಿಬಿರಾರ್ಥಿಗಳು ಸರ್ವ ಧರ್ಮ ವೇದಾಂತ ಸಮ್ಮೇಳನ ಮಾಡುವ ಮೂಲಕ ಗಮನ ಸೆಳೆದರು. ಬೇರೆ ಬೇರೆ ಸಮುದಾಯ ಪ್ರತಿನಿಧಿಸುವ ಪೂಜ್ಯರನ್ನು ಶರಣರನ್ನು ಸಂತರನ್ನು ವೇದಿಕೆ ಮೇಲೆ ಕುಳ್ಳಿರಿಸಿ ಕಲ್ಪನೆ ಮಾಡಿಕೊಂಡು ವಿಶಿಷ್ಟ ಶೈಲಿಯಲ್ಲಿ ನಿರ್ವಹಿಸಿ ಮನಾಕರ್ಷಿಸಿದರು.
ಗೋಷ್ಠಿ 3 ರಲ್ಲಿ “ನಿರೂಪಣೆಯಲ್ಲಿ ತಂತ್ರಜ್ಞಾನ” ದಿಗ್ದರ್ಶಕರಾಗಿ ಪ್ರೊ. ಮಗದುಮ್ ಅವರ ಉಪಸ್ಥಿತರಿದ್ದರು. ಖ್ಯಾತ ಗಣಿತ ತಜ್ಞರು, ಸಂಪನ್ಮೂಲ ವ್ಯಕ್ತಿ ಸಂತೋಷ ತಮದಡ್ಡಿ ಅವರ ಸಮರ್ಥ ಮಾರ್ಗದರ್ಶನದಲ್ಲಿ ಶಿಬಿರಾರ್ಥಿಗಳು ಕನ್ನಡ ಕೋಟ್ಯಾಧಿಪತಿ ಮಾದರಿಯಲ್ಲಿ ರಸಪ್ರಶ್ನೆ ಸ್ಫರ್ಧೆಗಳು ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಹೇಗೆ ನಡೆಯುತ್ತವೆ ಎಂಬುದನ್ನು ತೋರಿಸಿಕೊಟ್ಟರು. ಪ್ರೇಕ್ಷಕರು ತೀವ್ರ ಕುತೂಹಲದಿಂದ ಈ ಗೋಷ್ಠಿ ವೀಕ್ಷಣೆ ಮಾಡುತ್ತಿದ್ದುದು ಗಮನಾರ್ಹ.
ಅಪರಾಹ್ನ ಭೋಜನ ವಿರಾಮದ ನಂತರ ನಡೆದ ಗೋಷ್ಠಿ 4 ರಲ್ಲಿ “ರಾಜಕೀಯ ಕಾರ್ಯಕ್ರಮ” ಡಾ.ಸಿ.ಆರ್.ಗುಡಸಿ ದಿಗ್ದರ್ಶಕರಾಗಿ ಹಾಜರಿದ್ದರು. ರಮೇಶಕುಮಾರ ಘಂಟಿ ಅವರ ಮಾರ್ಗದರ್ಶನದಲ್ಲಿ ರೂಪುಗೊಂಡ ಶಿಬಿರಾರ್ಥಿಗಳು ವೇದಿಕೆ ಮೇಲೆ ಶಾಸಕ ಸಚಿವರು ನಗರ ಸಭೆ,ಪುರಸಭೆ ಸದಸ್ಯರನ್ನು ಕುಳ್ಳಿರಿಸಿ ಅಭಿವೃದ್ಧಿ ಕಾಮಗಾರಿಗಾರಿಗೆ ರಾಜ್ಯದ ಮುಖ್ಯ ಮಂತ್ರಿಗಳನ್ನು ಆಮಂತ್ರಿಸಿದಂತೆ ಚೆನ್ನಾಗಿ ಕಲ್ಪನೆ ಮಾಡಿಕೊಂಡು ರಾಜಕೀಯ ಕಾರ್ಯಕ್ರಮಗಳು ವಿಳಂಬವಾಗಿ ಆರಂಭಗೊಂಡು ಹೇಗೆ ತರಾತುರಿಯಲ್ಲಿ ಮುಗಿಯುತ್ತವೆ ಎಂಬುದನ್ನು ಚೆನ್ನಾಗಿ ದರ್ಶಿಸಿದರು.
ಕೊನೆಯ ಗೋಷ್ಠಿ 5 ರಲ್ಲಿ “ಸಾರ್ವಜನಿಕ ಜಾಗ್ರತಿ ಕಾರ್ಯಕ್ರಮ” ಪ್ರೊ.ಶ್ರೀಕಾಂತ ಪಾಟೀಲ ದಿಗ್ದರ್ಶಕರಾಗಿ ಉಪಸ್ಥಿತರಿದ್ದರು. ಕನ್ನಡ ಪ್ರಾಧ್ಯಾಪಕರಾದ ಡಾ.ಜಯವೀರ ಎ.ಕೆ. ಅವರ ದಿಕ್ಸೂಚಿಯಲ್ಲಿ ತಾಲೀಮು ಮಾಡಿದ ಶಿಬಿರಾರ್ಥಿಗಳು ಗ್ರಾಮ ಮಟ್ಟದಲ್ಲಿ ಆರೋಗ್ಯ ಜಾಗೃತಿ ಕಾರ್ಯಕ್ರಮಗಳು ಹೇಗಿರುತ್ತವೆ?.ಎಂದು ತೋರಿಸಿಕೊಟ್ಟರು. ಸಾಂಪ್ರದಾಯಿಕ ಕಾರ್ಯಕ್ರಮಗಳಲ್ಲಿ ಮಾಡುವ ಪ್ರಾರ್ಥನಾ ಗೀತೆ ಬದಲಿಗೆ ಆರೋಗ್ಯ ಗೀತೆ ಅಳವಡಿಸಿ ಗೀತೆಯ ಮೂಲಕ ನಮ್ಮ ಆರೋಗ್ಯದ ಮಹತ್ವ ಹಾಗೂ ನೈರ್ಮಲ್ಯ ಹಾಗೂ ಶುಚಿತ್ವದ ಕುರಿತು ಸಾಮಾನ್ಯ ನಾಗರಿಕನಿಗೂ ತಿಳಿಯಾದ ಶೈಲಿಯಲ್ಲಿ ಮನವರಿಕೆ ಮಾಡಿಕೊಟ್ಟರು. ಈ ಕಾರ್ಯಾಗಾರದ ಮುಖ್ಯ ರೂವಾರಿ ಆರ್.ಎಂ.ಪಾಟೀಲ ಅವರು ಈ 5 ಗೋಷ್ಠಿಗಳ ವೇದಿಕೆಯಲ್ಲಿ ವಿರಾಜಿಸದೇ ಪ್ರೇಕ್ಷಕರ ನಡುವೆಯೇ ಇದ್ದು ತೋರುಬೆರಳುಗಳಾಗಿ ಸಕಲ ಗೋಷ್ಠಿಗಳೂ ಗೆಲುವಿನ ಗೆರೆ ಸ್ಪರ್ಶಿಸಲು ಕಾರಣೀಕರ್ತರಾಗಿ, ಪ್ರೇಕ್ಷಕರ ಜೊತೆಯೇ ರಸನಿಮಿಷಗಳನ್ನು ಆಸ್ವಾಧಿಸಿದ್ದು ವಿಶೇಷವಾಗಿ ತೋರಿತು.
ಒಟ್ಟಾರೆಯಾಗಿ ಈ ವಿಶೇಷ ನಿರೂಪಣಾ ಕೌಶಲ್ಯಾಭಿವೃದ್ಧಿ ಕಮ್ಮಟದಲ್ಲಿ ಮಾರ್ಗದರ್ಶಕರಿಂದ ಚೆನ್ನಾಗಿ ತರಬೇತಿ ಪಡೆದುಕೊಂಡ ಶಿಬಿರಾರ್ಥಿಗಳು ವ್ಯಕ್ತಿತ್ವ ವಿಕಸನಕ್ಕೆ ದಿವ್ಯ ಪ್ರೇರಣೆ ನೀಡುವ ಈ ವಿಶೇಷ ಕಮ್ಮಟದಲ್ಲಿ ಅತ್ಯಂತ ಶ್ರದ್ಧೆ ನಿಷ್ಠೆಯಿಂದ ಪಾಲ್ಗೊಂಡು ಭರವಸೆ ಮೂಡಿಸಿದರು.ಪ್ರಾಮಾಣಿಕ ಪ್ರಯತ್ನ ಆತ್ಮವಿಶ್ವಾಸದಿಂದ ಈ ನಿರೂಪಣಾ ಕಲೆಯನ್ನು ಮುಂದುವರಿಸಿಕೊಂಡು ಹೋದರೆ ಭವಿಷ್ಯದಲ್ಲಿ ತಾರಾ ಮೌಲ್ಯದ ನಿರೂಪಕರಾಗಿ ಈ ನಾಡಿನಲ್ಲಿ ಹೊರಹೊಮ್ಮುವುದರಲ್ಲಿ ಯಾವ ಸಂದೇಹವಿಲ್ಲ. ತಾಲ್ಲೂಕಿನ ಎಲ್ಲಾ ಹಿರಿಯ ಕಿರಿಯ ಸಾಹಿತಿಗಳ, ಜನಪ್ರತಿನಿಧಿಗಳ, ಸ್ನೇಹಿತರ ಅಮೋಘ ಅಪೂರ್ವ ಆತ್ಮೀಯ ಸಹಕಾರದಿಂದ ಇಂತಹ ಕಾರ್ಯಾಗಾರಗಳು, ಕಮ್ಮಟಗಳು ಅಭೂತಪೂರ್ವ ಯಶಸ್ಸಿಗೆ ಮುಖ್ಯ ಕಾರಣ ಎಂದು ಕ್ರಿಯಾಶೀಲ ರಾಯಬಾಗ ತಾಲ್ಲೂಕು ಕ.ಸಾ.ಪ. ಅಧ್ಯಕ್ಷ ಆರ್.ಎಂ.ಪಾಟೀಲ ಅವರು ಅಭಿಮಾನ ಹಾಗೂ ಸಂತಸದಿಂದಲೇ ನುಡಿಯುತ್ತಾರೆ.
*ವರದಿ:ಡಾ.ಜಯವೀರ ಎ.ಕೆ*.
*ಖೇಮಲಾಪುರ*