ರಾಯಬಾಗ: ಶರಣರ ಭಾಷಾ ಸಂಸ್ಕೃತಿ ವಿಶ್ವದಲ್ಲಿಯೇ ವಿಶಿಷ್ಟವಾದುದು. ವಚನಗಳಲ್ಲಿ ಶರಣರು ಬಳಸಿದ ಭಾಷೆ ತುಂಬಾ ಸರಳವಾಗಿದ್ದು: ಭಾವಪೂರ್ಣವಾಗಿರುವುದು ವಿಶೇಷ. ಅವರು ತಮ್ಮ ಬದುಕಿನಲ್ಲಿ ಕಂಡುಡ ಅನುಭವಗಳನ್ನೇ ವಚನಗಳ ರೂಪದಲ್ಲಿ ಹೇಳಿದ್ದಾರೆ ಎಂದು ರಬಕವಿ ಹಿರಿಯ ಸಾಹಿತಿ ಶಿವಾನಂದ ದಾಸಾಳ ಹೇಳಿದರು.
ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ರಾಷ್ಟ್ರೀಯ ಟ್ರಸ್ಟ್ ಅಡಿಯಲ್ಲಿ ಶರಣ ಚೇತನ ಬಳಗ ಹಮ್ಮಿಕೊಂಡ ತಿಂಗಳ ಆಧ್ಯಾತ್ಮ ಜ್ಞಾನದಾಸೋಹ ಕಾರ್ಯಕ್ರಮದಲ್ಲಿ ಹದಿನೆಂಟನೆಯ ವಿಶೇಷ ಉಪನ್ಯಾಸ ಶರಣರು: ಭಾಷಾ ಸಂಸ್ಕೃತಿ ಕುರಿತು ಮಾತನಾಡಿದರು. ನುಡಿದರೆ ಮುತ್ತಿನ ಹಾರದಂತಿರಬೇಕು : ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು. ಮೃದು ವಚನವೇ ಸಕಲ ಜಪಂಗಳಯ್ಯ, ಮೃದು ವಚನಗಳೇ ಸಕಲ ತಪಂಗಳಯ್ಯ-ಇಂಥ ವಚನದ ಸಾಲುಗಳೇ ಮನುಷ್ಯರು ಆಡುವ ಮಾತುಗಳು ಹೇಗಿರಬೇಕು ಎಂಬುದನ್ನು ಶರಣರು ಸಾಕ್ಷಿಗಳಿಸಿ ಹೇಳಿದ್ದಾರೆ. ನಾವು ಆಡುವ ಭಾಷೆ ನಮ್ಮ ಸಂಸ್ಕೃತಿ ,ಆಚಾರ, ವಿಚಾರಗಳ ಕನ್ನಡಿಯಾಗಿದೆ. ನಮ್ಮ ಮಕ್ಕಳಿಗೆ ಯುವಕರಿಗೆ ವಚನಗಳ ಮೂಲಕ ಶರಣರ ಭಾಷಾ ಸಂಸ್ಕೃತಿ ಕಲಿಸುವುದು ಅಗತ್ಯವಿದೆಂದರು.
ಟ್ರಸ್ಟ್ ಅಧ್ಯಕ್ಷ ಡಾ .ಬಿ. ಎಂ .ಪಾಟೀಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶರಣರ ವಚನಗಳಲ್ಲಿ ನಮ್ಮ ಬದುಕಿಗೆ ಬೇಕಾದ ಮೌಲಿಕ ವಿಚಾರಗಳು ಸಾಕಷ್ಟಿವೆ. ನಮ್ಮ ನಾಲಿಗೆಯೆ ಸ್ವರ್ಗ ,ನರಕ, ಸಂಪತ್ತು, ಆಪತ್ತು ತಂದು ಕೊಡುವ ಖಜಾನೆಯಾಗಿದೆ. ಕಾರಣ ಮಾತು ಆಡುವುದಕ್ಕಿಂತ ಮೊದಲು ಹತ್ತಾರು ಸಲ ಯೋಚಿಸಬೇಕೆಂದರು.
ಸಂವಾದ ಕಾರ್ಯಕ್ರಮದಲ್ಲಿ ಪಿ. ಬಿ. ಮುನ್ಯಾಳ್, ಎಚ್. ಎ .ಭಜಂತ್ರಿ, ಶಂಕರ್ ನಾಯಕ್, ವಿಶ್ವನಾಥ್ ರಾಜ ಪುರೆ, ಎಸ್ ಎಸ್ ಮೀಸಿ ಪಾಲ್ಗೊಂಡಿದ್ದರು. ಅಶೋಕ್ ದೇಶಿಂಗೆ, ಕುಮಾರ್ ಕುಲಗುಡೆ, ಆರ್ ಎಸ್ ಧುಮಾಳೆ, ಮಲ್ಲೇಶ್ ದೊಡಮನಿ, ಎ. ಎಸ್. ಮುಗಳಕೋಡ್, ಎಸ್. ಆರ್. ಸೊಲ್ಲಾಪುರೆ, ಬಿ .ಎಸ್. ಪಾಟೀಲ, ಎಸ್. ಆಯ್. ದನೋಡೆ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಪಾವನಿ ಶಾಂಭವಿ ದೊಡವಾಡ ವಚನ ಪ್ರಾರ್ಥನೆ ಹೇಳಿದರು. ಎಸ್.ಎಸ್. ಕಾಂಬಳೆ ಸ್ವಾಗತಿಸಿದರು. ಶಿವಪುತ್ರ ಅಮರಶೆಟ್ಟಿ ಶರಣು ಸಮರ್ಪಣೆ ಹೇಳಿದರು. ಸವಿತಾ ಶ್ರೀಧರ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.





