ಶೈಕ್ಷಣಿಕ ಪರೀಕ್ಷೆ ಪದವಿಯತನಕ ಜೀವನದ ಪರೀಕ್ಷೆ ಕೊನೆಯತನಕ  –  ಪ್ರೊ. ತಳವಾರ ಸಾಬಣ್ಣ

Share the Post Now

ನಮ್ಮ ಬದುಕಿನ ನಕಾಶೆಯನ್ನು ನಾವೇ ಸಿದ್ಧಪಡಿಸಿಕೊಳಬೇಕು. ಅದನ್ನು  ಸಾಕಾರ ಮಾಡಲು ಪ್ರಯತ್ನ, ಪರಿಶ್ರಮ, ಶ್ರದ್ಧೆಯಿರಬೇಕು ಎಂದು
 ವಿಧಾನ ಪರಿಷತ್ ಸದಸ್ಯ ಪ್ರೊ. ತಳವಾರ ಸಾಬಣ್ಣ ಅವರು ಅಭಿಪ್ರಾಯಪಟ್ಟರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ  2022-23ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್. ಎಸ್. ಎಸ್. ರೆಡ್ ಕ್ರಾಸ್ ಕಾರ್ಯಚಟುವಟಿಕೆಗಳ ಸಮಾರೋಪ  ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು  ಮಹಾವಿದ್ಯಾಲಯದ  ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.  ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಪ್ರೊ.  ತಳವಾರ ಸಾಬಣ್ಣ ಮಾತನಾಡಿದರು. ವಿದ್ಯಾರ್ಥಿಗಳು ಪದವಿಯನ್ನು ತೆಗೆದುಕೊಂಡು  ಹೋಗುವುದರ ಜೊತೆಗೆ ಜ್ಞಾನವನ್ನು ತೆಗೆದುಕೊಂಡು ಹೋಗಿ. ಜಗತ್ತು ಇಂದು ಬಯಸುವುದು ಜ್ಞಾನ ಮತ್ತು ಸಮರ್ಪಣೆ. ಜ್ಞಾನಂ ಸರ್ವತ್ರ ಪೂಜ್ಯತೆಯಾಗಿದೆ. ಈ ಭೂಮಿಯ ಮೇಲೆ ಎಲ್ಲರೂ ಸಮಾನವಾಗಿಲ್ಲ. ಪ್ರತಿಯೊಂದು ಸ್ತರದಲ್ಲಿಯೂ ತರತಮವಿದೆ. ಆದರೆ  ಈ ಭೂಮಿಯ ಮೇಲಿರುವವರಿಗೆ ದಿನದ ಸಮಯ ಒಂದೇ ಆಗಿರುತ್ತದೆ. ಯಾರು ಸಮಯಕ್ಕೆ ಗೌರವ ಕೊಡುತ್ತಾರೋ ಅವರಿಗೆ ಸಮಯ ಗೌರವಿಸುತ್ತದೆ ಎಂದರು.

ರಾಚವಿಯ ಹಣಕಾಸು ಅಧಿಕಾರಿಗಳಾದ  ಪ್ರೊ.  ಎಸ್. ಬಿ. ಆಕಾಶ ಅವರು ವಿದ್ಯಾರ್ಥಿಗಳಲ್ಲಿ  ಸಂಸ್ಕೃತಿ, ಸಂಸ್ಕಾರವಿರಲಿ. ಪ್ರತಿಯೊಬ್ಬರೂ ಶ್ರಮಸಂಸ್ಕ್ರತಿಯನ್ನು  ಅಳವಡಿಸಿಕೊಳ್ಳಿ.  ನೈತಿಕತೆ, ಮೌಲ್ಯಗಳು ಸದಾ ನಿಮ್ಮ ಜೊತೆಗಿರಬೇಕು. ಬದ್ಧತೆಯಿಂದ ಮಾಡುವ ಕೆಲಸ ನಿಮ್ಮ ಬದುಕನ್ನು ಉನ್ನತೀಕರಿಸುತ್ತದೆ. ಶಿಕ್ಷಣದಲ್ಲಿ ಪಡೆದ ಜ್ಞಾನ ಹಾಗೂ ಕೌಶಲ್ಯಗಳನ್ನು ನಿಮ್ಮ ಉದ್ಯೋಗದಲ್ಲಿ ಬಳಸಿಕೊಳ್ಳಿ. ಆಗ ನೀವು ಸಾಧಕರಾಗಿ ಹೊರಹೊಮ್ಮುತ್ತಿರಿ. ಪೋಷಕರು, ಸರಕಾರ, ಸಮಾಜ ನಿಮ್ಮ ಜೊತೆಗಿದೆ ಮುನ್ನಡೆಯಬೇಕಾದವರು ನೀವೇ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ  ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಶಂಕರ ಎಸ್  ತೇರದಾಳ ಅವರು ನಮ್ಮ ಮಹಾವಿದ್ಯಾಲಯವು  ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಕಲಿಕೆಗೆ ಉತ್ತಮವಾದ ಭೂಮಿಕೆಯನ್ನು ಒದಗಿಸುತ್ತಿದೆ.  ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳು, ಕುಲಸಚಿವರು, ಹಾಗೂ ಅಧಿಕಾರಿಗಳ ನಿರಂತರ ಪ್ರೋತ್ಸಾಹದಿಂದ ಈ ಮಹಾವಿದ್ಯಾಲಯವು ಶ್ರೇಷ್ಠ ವಿದ್ಯಾಸಂಸ್ಥೆಯಾಗಿ, ಅತ್ಯಾಧುನಿಕ  ಸೌಲಭ್ಯಗಳಿಂದ ಕೂಡಿದೆ.  ನಮ್ಮ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯ ಮೂಲಕ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ವಿದ್ಯಾರ್ಥಿಗಳು ತಾವು ಪಡೆದುಕೊಂಡಿರುವ ಜ್ಞಾನವನ್ನು ಸರಿಯಾಗಿ ಬಳಸಿಕೊಂಡು  ತಾವು ಯಶಸ್ವಿಯಾಗಬೇಕು. ಅದುವೇ ತಾವು ಕಲಿತ ಶಿಕ್ಷಣ ಸಂಸ್ಥೆಗೆ ಕೊಡುವ ಅತೀ ದೊಡ್ಡ ಗೌರವ. ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವ ಮತ್ತು ಭವಿಷ್ಯವನ್ನು  ರೂಪಿಸಿಕೊಳ್ಳುವುದರ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದರು.

ಸಾಂಸ್ಕೃತಿಕ ವಿಭಾಗದ ಸಂಚಾಲಕರಾದ ಡಾ. ಅರ್ಜುನ್ ಜಂಬಗಿ ವಾರ್ಷಿಕ ವರದಿ ವಾಚಿಸಿದರು.  ವಿದ್ಯಾರ್ಥಿಗಳ ಪ್ರತಿನಿಧಿಗಳಾದ ಲಕ್ಷ್ಮೀ  ರಾಯಣ್ಣವರ, ಲಕ್ಷಣ ನಾಯಕ, ದೀಪಕ ಪಾಟೀಲ್  ಅವರು ಅನಿಸಿಕೆಗಳನ್ನು ಹಂಚಿಕೊಂಡರು. ಡಾ. ಮಲ್ಲೇಶ ದೊಡ್ಡಲಕ್ಕಣ್ಣವರ ಪರಿಚಯಿಸಿದರು. ವಿದ್ಯಾರ್ಥಿನಿ ಶಾಂಭವಿ ವಂದಿಸಿದರು. ವಿದ್ಯಾರ್ಥಿನಿ ಕಲ್ಪನಾ ಮುಚ್ಚಂಡಿ ಪ್ರಾರ್ಥಿಸಿದರು. ಡಾ. ಬಿ. ಆರ್. ರಾಧಾ ನಿರೂಪಿಸಿದರು.  ಕಾರ್ಯಕ್ರಮದಲ್ಲಿ  ಮಹಾವಿದ್ಯಾಲಯದ ಬೋಧಕ –  ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

error: Content is protected !!