ಬೆಳಗಾವಿ.ರಾಯಬಾಗ: ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 6 ವರುಷದ ಮೊಮ್ಮಗಳ ಮೇಲೆಯೇ ಅಜ್ಜನೇ ಅತ್ಯಾಚಾರ ನಡೆಸಿರುವ ಘಟನೆಯ ವರದಿ ಇತ್ತೀಚಿಗೆ ಮಾಧ್ಯಮಗಳಲ್ಲಿ ನೋಡಿ ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಾಗಿದೆ.
ಈ ದೇಶದಲ್ಲಿ ನಿತ್ಯ ಅವ್ಯಾಹತವಾಗಿ ನಿರಂತರವಾಗಿ ಅಪ್ರಾಪ್ತ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆಯುತ್ತಲೇ ಇವೆ. ರಕ್ಷಕರೇ ಭಕ್ಷಕರಾಗುತ್ತಿರುವ ಇಂದಿನ ಸಂಕೀರ್ಣ ಸಮಾಜದಲ್ಲಿ ಈ ಮುಗ್ದ ಹೆಣ್ಣುಮಕ್ಕಳು ಯಾರನ್ನು ನಂಬಬೇಕು ಯಾರನ್ನು ಬಿಡಬೇಕು?. ಎಂಬುದೇ ದಿಕ್ಕು ತೋಚದಂತಾಗಿರುವುದು ಸ್ಪಟಿಕ ಸ್ಪಷ್ಟ.ಮಾನವೀಯ ಮೌಲ್ಯಗಳು ಮಲೀನಗೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ಮಾನವೀಯ ಸಂಬಂಧಗಳಿಗೆ ನಿಜಕ್ಕೂ ಕವಡೆ ಕಾಸಿನ ಕಿಮ್ಮತ್ತು ಇಲ್ಲವಾದಂತಾಗಿದೆ. “ಈ ಭೂಮಿಯ ತಲೆಯ ಮೇಲೆ ವಿಪರೀತ ಪಾಪ ತುಂಬಿಕೊಂಡಿದೆ” ಎಂದು ನಡೆಯುತ್ತಿರುವ ಈ ಹೀನ ಕೃತ್ಯಗಳನ್ನು ಗಮನಿಸಿಯೇ ನಮ್ಮ ಹಿರಿಯರು ತೀವ್ರ ಬೇಸರದಿಂದಲೇ ಹೇಳುವ ಈ ಮಾತುಗಳು ಅಕ್ಷರಶಃ ಸಾರ್ವತ್ರಿಕ ಸತ್ಯ.
ಪ್ರಸ್ತುತ ಈ ಘಟನೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಈ ಸಮಾಜದಲ್ಲಿ ಬ್ರಾತೃತ್ವ ಬತ್ತಿದೆ, ಸಹೋದರತೆ ಸತ್ತಿದೆ, ಮನುಷ್ಯತ್ವವೇ ಮಣ್ಣು ಪಾಲಾಗಿದೆ. ಪಾಲಾಗುತ್ತಿರುವುದು ಬಹು ದೊಡ್ಡ ದುರಂತ. ಹಾಗೂ ಸಖೇದ ಆಶ್ಚರ್ಯ. ವಾತ್ಸಲ್ಯ ಪ್ರೀತಿಯಿಂದ ಕಂಡು ಸುರಕ್ಷತೆಯ ರಕ್ಷಾಗೋಡೆಯಾಗಬೇಕಾಗಿದ್ದ ಅಜ್ಜನೇ ತನ್ನ ಮೊಮ್ಮಗಳ ಮೇಲೆಯೇ ವಿಕೃತನಾಗಿ ಅತ್ಯಾಚಾರವೆಸಗಿದ್ದನ್ನು ಸುದ್ದಿ ಮಾಧ್ಯಮಗಳಲ್ಲಿ ನೋಡಿದ ನಂತರ ನನಗೆ 12 ನೇ ಶತಮಾನದ ಅಣ್ಣ ಬಸವಣ್ಣವರ “ನಾರಿ ತನ್ನ ಮನೆಯಲ್ಲಿ ಕಳುವಡೆ, ತಾಯ ಮೊಲೆವಾಲು ನಂಜಾಗಿ ಕೊಲುವಡೆ, ಇನ್ನಾರಿಗೆ ನಾ ದೂರುವೆ ಕೂಡಲಸಂಗಮದೇವಾ!! ಎಂಬ ವಚನದ ಸಾಲುಗಳು ನನ್ನ ಕಣ್ಮುಂದೆ ಕೆಲಕಾಲ ಸುಳಿದಾಡಿದವು.
*ಡಾ. ಜಯವೀರ ಎ.ಕೆ*.
*ಖೇಮಲಾಪುರ*