ವಿದ್ಯಾರ್ಥಿಗಳ ನಡತೆ ಮನೆಯವರು ತಲೆ ತಗ್ಗಿಸದಂತಿರಲಿ:ಪಿಎಸ್ಐ ಗಿರಮಲ್ಲಪ್ಪ ಉಪ್ಪಾರ.

Share the Post Now

ವರದಿ: ರಾಜಶೇಖರ ಶೇಗುಣಸಿ.


ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ, ಪದವಿ ಮಹಾವಿದ್ಯಾಲಯದ ಸಹಯೋಗದೊಂದಿಗೆ ಆಚರಣೆ ಮಾಡಿದ ಪೊಲೀಸ್ ಇಲಾಖೆ, ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು.

ಮುಗಳಖೋಡ: ಗಾಂಜಾ, ಗುಟಕಾ ಮುಂತಾದ ಮಧ್ಯಸೇವನೆಗಳಿಂದ  ಸದಸ್ಯರನ್ನು ಕಳೆದುಕೊಳ್ಳುತ್ತಿರುವ ಎಷ್ಟೋ ಕುಟುಂಬಗಳನ್ನು ನಾವು ನೋಡುತ್ತಿದ್ದೇವೆ ಮಧ್ಯಪಾನ ವೈಯಕ್ತಿಕ ಜೀವನವನ್ನು ಹಾಳುಮಾಡುತ್ತದೆ. ಗ್ರಾಮ ಮತ್ತು ಪಟ್ಟಣಗಳಲ್ಲಿ ಮಾದಕ ದ್ರವ್ಯಗಳನ್ನು ಬೆಳೆಯುತ್ತಿದ್ದರೆ ಮತ್ತು ಮಾರುತ್ತಿದ್ದರೆ ಅಂತವರ ಮಾಹಿತಿ ಪೊಲೀಸ್ ಇಲಾಖೆಗೆ ನೀಡಬೇಕು. ಸಿಗರೇಟು, ಗುಟಕಾ, ತಂಬಾಕು, ಡ್ರಗ್ಸ್, ಅಫೀಮು, ಗಾಂಜಾ ಇಂತಹ ಮಾದಕ ದ್ರವ್ಯಗಳ ದುಶ್ಚಟಗಳಿಗೆ ಅಂಟಿಕೊಳ್ಳುತ್ತಿರುವ ಇವತ್ತಿನ ಯುವಕ ಯುವತಿಯರಿಗೆ ಇವೆಲ್ಲ ಸೇವನೆಗಳಿಂದ ಆಗುತ್ತಿರುವ ಹಾನಿಗಳನ್ನು ತಿಳಿಹೇಳಿ ಒಳ್ಳೆಯ ಸಂಸ್ಕಾರ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.  ಯಾವಾಗಲು ನಮ್ಮ ಮನೆಯವರು ಸಮಾಜದ ಮುಂದೆ ತಲೆ ತಗ್ಗಿಸದಂತಹ ನಡತೆ ನಮ್ಮದಾಗಬೇಕು ಅವಾಗ ಸಮಾಜ ನಮ್ಮನ್ನು ಗೌರವಿಸುತ್ತದೆ ಎಂದು ಹಾರೂಗೇರಿ ಪಿಎಸ್ಐ ಗಿರಮಲ್ಲಪ್ಪ ಉಪ್ಪಾರ ಹೇಳಿದರು.

ಅವರು ಮುಗಳಖೋಡ ಪಟ್ಟಣದ ಡಾ. ಸಿ. ಬಿ. ಕುಲಿಗೋಡ ಪದವಿ ಮಹಾವಿದ್ಯಾಲಯದಲ್ಲಿ ಬೆಳಗಾವಿ ಜಿಲ್ಲಾ ಪೊಲೀಸ್ ಹಾರೂಗೇರಿ ಪೊಲೀಸ್ ಠಾಣೆಯ ಸಹಯೋಗದೊಂದಿಗೆ ಹಮ್ಮಿಕೊಂಡ ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ ಮೊಬೈಲ್ ಬಳಕೆಯಿಂದ ನಮ್ಮ ನಮ್ಮ ಸಂಬಂಧಗಳು ನಾಶವಾಗುತ್ತಿವೆ. ಇತ್ತೀಚಿನ ದಿನಮಾನಗಳಲ್ಲಿ ಮಾದಕ ವ್ಯವಸ್ಥೆಗೆ ಅಂಟಿಕೊಳ್ಳುತ್ತಿರುವವರಲ್ಲಿ ಕಾಲೇಜು ವಿದ್ಯಾರ್ಥಿಗಳೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಯಾವುದೇ ಮಾದಕ ದ್ರವ್ಯಕ್ಕೆ ಅಂಟಿಕೊಳ್ಳದೆ ತಂದೆ ತಾಯಿ ಮತ್ತು ಗುರುಗಳು ನೀಡಿದ ಸಂಸ್ಕಾರವನ್ನ ಅಳವಡಿಸಿಕೊಂಡು ತಮ್ಮ ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. ಜೊತೆಗೆ ವಿದ್ಯಾರ್ಥಿಗಳಿಗೆ ಬೈಕ್ ಮೇಲೆ ಸಂಚಾರ ಮಾಡುವಾಗ ಹೆಲ್ಮೆಟ್, ಡ್ರೈವಿಂಗ್ ಲೈಸೆನ್ಸ್, ಹಾಗೂ ಇನ್ಸೂರೆನ್ಸ್ ಗಳನ್ನು ಕುರಿತು ಸಂಚಾರಿ ನಿಯಮ ಪಾಲನೆಯ ಬಗ್ಗೆ ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷಸ್ಥಾನವಹಿಸಿದ ಇಂಗ್ಲಿಷ್ ವಿಭಾಗದ ಉಪನ್ಯಾಸಕ ಪ್ರೊ. ಆರ್. ಎಸ್. ಶೇಗುಣಸಿ ಮಾತನಾಡಿ ಪ್ರೌಢಾವಸ್ಥೆ ಮತ್ತು ಯೌವನಾವಸ್ಥೆಯಲ್ಲಿ ಮನಸ್ಸಿನ ಮೇಲೆ ಯಾವ ರೀತಿ ಬದಲಾವಣೆಗಳು ಆಗುತ್ತವೆ ಆ ಸಂದರ್ಭದಲ್ಲಿ ಮನಸ್ಸಿನ ಮಾತು ಕೇಳಿದರೆ ಏನೆಲ್ಲ ಗೊಂದಲಗಳು ಸೃಷ್ಟಿ ಆಗಬಹುದು ಎಂಬುದನ್ನ ಕುರಿತು ತಿಳಿಸಿ, ಯಾವುದೇ ದುಶ್ಚಟಗಳಲ್ಲಿ ಭಾಗಿಯಾಗದೆ ಈ ವ್ಯವಸ್ಥೆಯಲ್ಲಿ ಗಟ್ಟಿತನದಿಂದ ಕೂಡಿದ ಮನಸ್ಸು ವಿದ್ಯಾರ್ಥಿಗಳದ್ದಾಗಬೇಕು ಅಂದಾಗ ಮಾತ್ರ ಮುಂದಿನ ಜೀವನ ಸರಳವಾಗಿ ಸಾಗುವುದು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮವನ್ನು ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಸಂಗಮೇಶ ಹಿರೇಮಠ ನಿರೂಪಿಸಿ ವಂದಿಸಿದರು.

ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಅಶೋಕ್ ಶಾಂಡಿಗಿ, ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಪಿ.ಬಿ.ಕೊರವಿ, ಎಚ್. ಎಮ್. ಕಂಕಣವಾಡಿ, ಬಿ.ಎಸ್. ಸವಸುದ್ದಿ, ಕೆ. ಪಿ.ಹಾಲಳ್ಳಿ, ಗ್ರಂಥಪಾಲಕ ಸಂಗಣ್ಣ ತೇಲಿ, ಹುಸೇನ್ ಯಲಿಗಾರ್, ಬಸವರಾಜ್ ಸಣ್ಣಕ್ಕಿನವರ ಸೇರಿದಂತೆ ವಿದ್ಯಾರ್ಥಿ ವೃಂದದವರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

error: Content is protected !!