ಬೆಳಗಾವಿ
ಹಳ್ಳೂರ.ಹಳ್ಳಿಗಳ ಚರಿತ್ರೆಯೆ ಮುಂದೆ ರಾಜ್ಯದ ಚರಿತ್ರೆಯಾಗುತ್ತದೆ. ಸಣ್ಣಪುಟ್ಟ ಗ್ರಾಮಗಳ ಹಾಗೂ ದೈವ-ದೇವರು, ಜನ ಸಮುದಾಯದ ಇತಿಹಾಸ ದಾಖಲೆಗೊಳ್ಳಬೇಕಾಗಿರುವುದು ಅವಶ್ಯಕವಾಗಿದೆ. ಮುಂದಿನ ಪೀಳಿಗೆಗೆ ಇತಿಹಾಸ ಕಟ್ಟಿಕೊಡುವ ಮಾರ್ಗದರ್ಶಿಯಾಗವ ಇಂಥಹ ಮೌಲಿಕ ಕೃತಿಗಳ ರಚನೆಯಾಗಬೇಕಿದೆ . ಇಂಥ ಕಾರ್ಯ ಮಾಡಿದ ನರೋಡೆ ಹಾಗೂ ರೋಹಿಣಿಯವರು ಈ ಕೃತಿ ರಚಿಸಿ ಉತ್ತಮ ಕೆಲಸ ಮಾಡಿದ್ದಾರೆ ಎಂದು ನಿಡಸೋಸಿಯ ಜಗದ್ಗುರು ಶಿವಲಿಂಗೇಶ್ವರ ಮಹಾಸ್ವಾಮಿಗಳು ಹೇಳಿದರು.
ರಾಯಬಾಗ ತಾಲೂಕಿನ ಹಂದಿಗುಂದ ಗ್ರಾಮದ ಶ್ರೀ ಸಿದ್ಧೇಶ್ವರ ಮಹಾಶಿವಯೋಗಿಗಳ ೪೯ ನೇ ಜಾತ್ರಾಮಹೋತ್ಸವ ಸಮಾರಂಭದ ದಿವ್ಯಸಾನಿಧ್ಯವನ್ನ ವಹಿಸಿ ಡಾ.ಅಶೋಕ ನರೋಡೆ ಹಾಗೂ ರೋಹಿಣಿ ಯಾದವಾಡ ಅವರು ರಚಿಸಿದ ” ಹಂದಿಗುಂದ ಶ್ರೀ ಸಿದ್ಧೇಶ್ವರ ಮಠದ ಪರಂಪರೆ ” ಕೃತಿಯನ್ನು ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡುತ್ತಾ ಹಂದಿಗುಂದ ಶ್ರೀಮಠದ ಪೂಜ್ಯರು ವಿಭಿನ್ನವಾಗಿ ಜಾತ್ರೆಯ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದು ಈ ಪರಿಸರದಲ್ಲಿ ಧಾರ್ಮಿಕ ಜಾಗೃತಿಯೊಂದಿಗೆ ಸಾಹಿತ್ಯಿಕ ಅರಿವನ್ನು ಮೂಡಿಸಿದ್ದಾರೆ ಎಂದರು.
ಕೃತಿಯ ಕುರಿತು ಲೇಖಕರಾದ ಡಾ. ಅಶೋಕ ನರೋಡೆಯವರು ಪರಿಚಯಿಸುತ್ತ ಸಾಹಿತ್ಯ ಸಮ್ಮೇಳನಗಳು ಜಾತ್ರೆಗಳಾಗುತ್ತಿವೆ ಎಂಬ ಕೂಗಿರುವಾಗ, ಹಂದಿಗುಂದದಲ್ಲಿ ಜಾತ್ರೆಯು ಸಮ್ಮೇಳನ ರೂಪತಾಳಿ ಆಚರಿಸುತ್ತಿರುವುದು ವಿಶೇಷ ಎಂದರು.
ನೇತೃತ್ವ ವಹಿಸಿದ್ದ ಹಂದಿಗುಂದ ವಿರಕ್ತ ಮಠದ ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಗಳು ಆಶೀರ್ವಚನ ನೀಡುತ್ತ ಮುಚ್ಚಿಹೋಗುತ್ತಿರುವ ಇತಿಹಾಸವನ್ನು ಮುಂದಿನ ನಾಗಕರಿಗೆ ಕಟ್ಟಿಕೊಡುವ ಕಾರ್ಯ ಇರ್ವರೂ ಲೇಖಕರು ಮಾಡಿದ್ದಾರೆ. ಗ್ರಾಮದ ಶ್ರೀಮಠದ ಇತಿಹಾಸ ಎಲ್ಲರೂ ತಿಳಿಯಬೇಕು. ಪ್ರತಿಯೊಂದು ಮನೆಯಲ್ಲೂ ಈ ಕೃತಿ ಇರಬೇಕು ಎಂದರು.
ಈ ಸಮಯದಲ್ಲಿ ಬೆಲ್ಲದ ಬಾಗೇವಾಡಿಯ ಶ್ರೀ ಶಿವಾನಂದ ಮಹಾಸ್ವಾಮಿಗಳು, ಶೇಗುಣಸಿಯ ಶ್ರೀ ಮಹಾಂತಪ್ರಭು ಸ್ವಾಮೀಜಿ, ಕೃತಿಯ ಲೇಖಕಿ ರೋಹಿಣಿ ಯಾದವಾಡ, ಜಮಖಂಡಿಯ ಧರ್ಮಲಿಂಗಯ್ಯ ಜಗದೀಶ ಗುಡಗುಂಟಿ, ತೇರದಾಳದ ನಾಗಪ್ಪಣ್ಣ ಸನದಿ ಉಪಸ್ಥಿತರಿದ್ದರು. ದೋಟಿಹಾಳದ ಶ್ರೀ ಚಂದ್ರಶೇಖರ ದೇವರು ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ರೇಖಾ ಬಿರಾದರ ವಚನ,ಪ್ರಾರ್ಥನೆ ನೆರವೇರಿಸಿದರು.