ಬೆಳಗಾವಿ.
ರಾಯಬಾಗ:ಹೆಣ್ಣಿನ ಸಾಧನೆ, ವೇದನೆ, ಅಸಹಾಯಕತೆ, ತವಕ ತಲ್ಲಣಗಳು “ಭೂಮಿ ತೂಕದ ಹೆಣ್ಣು” ಕವನ ಸಂಕಲನದ ಒಟ್ಟು ಹೂರಣವಾಗಿದೆ ಎಂದು ಪಟ್ಟಣದ ಜನಾನುರಾಗಿ ನ್ಯಾಯವಾದಿ, ಸಾಹಿತಿ ಶ್ರೀ ಡಿ ಎಚ್ ಯಲ್ಲಟ್ಟಿ ಹೇಳಿದರು.
ಡಾ. ಬಾಬುರಾವ ನಡೋಣಿ ರಾಷ್ಟ್ರೀಯ ಪ್ರತಿಷ್ಠಾನ, ಚು. ಸಾ.ಪ ಹಾಗೂ ಮ. ಸಾ. ಪ. ತಾಲೂಕು ಘಟಕಗಳ ಸಹಯೋಗದಲ್ಲಿ ಶನಿವಾರ ದಿ. 8 ರಂದು ಬೆಳಿಗ್ಗೆ “ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ” ನಿಮಿತ್ಯ ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಹಮ್ಮಿಕೊಂಡ ಸಾಹಿತಿ ಡಾ. ಜಯವೀರ ಎ.ಕೆ. ಹಾಗೂ ಕವಿ ಪ್ರೊ ಎಲ್ ಎಸ್ ವಂಟಮೂರೆ ಅವರು ಸಂಪಾದಿಸಿದ “ಭೂಮಿ ತೂಕದ ಹೆಣ್ಣು” ಚೊಚ್ಚಿಲ ಸಂಪಾದಿತ ಕವನ ಸಂಕಲನದ ಲೋಕಾರ್ಪಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಕೃತಿ ಪರಿಚಯಿಸಿ ಮಾತನಾಡಿದರು.
ಒಂದೇ ವಿಷಯದ ಕುರಿತು ಸಾಮಾಜಿಕ ಹಿನ್ನೆಲೆ ಹೊಂದಿರುವ ಬೇರೆ ಬೇರೆ ಪ್ರದೇಶದ ಕವಿಗಳ ವೈವಿಧ್ಯಮಯ ಸಂವೇದನೆಗಳು ಈ ಕೃತಿಯಲ್ಲಿನ ಬಹುತೇಕ ಕವಿಗಳಿಂದ ಆವಿರ್ಭಸಿದ ಕವಿತೆಗಳು ವಿಭಿನ್ನ ಅಭಿವ್ಯಕ್ತಿಯ ವಿನ್ಯಾಸದಲ್ಲಿ ವಿಶಿಷ್ಟವಾಗಿ ಮೈದಾಳಿದ್ದು ಗಮನಾರ್ಹ ಎಂದರು. ಮಹಿಳೆ ಈಗವಳು ಅಬಲೆಯಲ್ಲ ಸಮಕಾಲಿನ ಸಂದರ್ಭದಲ್ಲಿನ ಈಗಿನ ಕವಿಗಳು ಅವಳ ಅಸಹಾಯಾಕತೆಯನ್ನು ಕವಿತೆಯಲ್ಲಿ ಪ್ರಸ್ತುತ ಯಥೇಚ್ಛವಾಗಿ ಬಿಂಬಿಸುವ ಕಾಲವಲ್ಲವಿದು ಎಂದರು. ಹೆಣ್ಣು ಅಬಲೆಯಾಗಿದ್ದಾಳೆ ಎಂಬುದನ್ನು ಪುರುಷ ಪ್ರದಾನ ಸಮಾಜ ಅವಳ ಮೇಲೆ ಹೇರಿಕೆ ಮಾಡಿದೆ ಎಂದು ಸೋದಾಹರಣವಾಗಿ ವಿಶ್ಲೇಷಿಸಿದರು. ಇದಕ್ಕೂ ಮೊದಲು ವೇದಿಕೆ ಮೇಲಿನ ಗಣ್ಯ ಮಹೋದಯರು ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವಿಶ್ರಾಂತ ಕನ್ನಡ ಪ್ರಾಧ್ಯಾಪಕಿ ಸಾಹಿತಿ ಡಾ. ರತ್ನಾ ಬಾಳಪ್ಪನವರ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿ, ಸಾರಸ್ವತ ಲೋಕದಲ್ಲಿ ಗಟ್ಟಿಯಾಗಿ ಅಡಿ ಇರಿಸಿದ ಕ್ರಿಯಾಶೀಲ ಅಧ್ಯಾಪಕ ಡಾ. ಜಯವೀರ ಎ. ಕೆ. ಹಾಗೂ ಕವಿ ಪ್ರೊ ಎಲ್ ಎಸ್ ವಂಟಮೂರೆ ಅವರನ್ನು ತುಂಬು ಮನದಿಂದ ಶ್ಲಾಘಿಸಿ ಅಭಿನಂದಿಸಿದರು.ಇದೆ ಸಂದರ್ಭದಲ್ಲಿ ಕೃತಿಯ ಉಭಯ ಸಂಪಾದಕರನ್ನು ಭೂಮಾತಾ ಪ್ರಕಾಶನದ ಕವಿ, ಶಿಕ್ಷಕ ಎಂ ಕೆ ಶೇಖ್ ಹಾಗೂ ಕವಿಯತ್ರಿ ಡಾ. ರತ್ನಾ ಬಾಳಪ್ಪನವರ ಅವರು ಅಭಿಮಾನದಿಂದ ಶಾಲು ಹೊದಿಸಿ ಕೃತಿ ನೀಡಿ ಸತ್ಕರಿಸಿ ಗೌರವಿಸಿದರು.
ಕನ್ನಡ ಪ್ರಾಧ್ಯಾಪಕ ಶ್ರೀ ಶ್ರೀಕಾಂತಗೌಡ ಪಾಟೀಲ ತಮ್ಮ ಮನದಾಳದ ಮಾತುಗಳನ್ನು ಸೊಗಸಾಗಿ ಹಂಚಿಕೊಂಡರು. ಹಿರಿಯ ಕವಿ ಪ್ರೊ ಶಿವಾನಂದ ಬೆಳಕೂಡ ಘನ ಅಧ್ಯಕ್ಷತೆ ವಹಿಸಿ ಆಶಯ ನುಡಿಯಾಡಿದರು.
ಡಾ. ಬಿ ಎಂ ಪಾಟೀಲ,
ಡಾ.ಬಾಬುರಾವ ನಡೋಣಿ, ಎಸ್. ಎಸ್ ಕಾಂಬಳೆ, ಪಿ ಬಿ ಮುನ್ಯಾಳ, ಸಾಗರ ಝೆ0ಡೆನ್ನವರ ಹಾಗೂ ಮತ್ತಿತರ ಗಣ್ಯರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಶಿಕ್ಷಕಿ ರೇಖಾ ಗುಪ್ತೆ ನಾಡಗೀತೆಗೆ ಸೊಗಸಾಗಿ ಧ್ವನಿದಾನ ಮಾಡಿದರು. ಪ್ರೊ ಎಲ್ ಎಸ್ ವಂಟಮೂರೆ ಸ್ವಾಗತಿಸಿದರು. ಡಾ. ಜಯವೀರ ಎ.ಕೆ. ಪ್ರಸ್ತಾವಿಕವಾಗಿ ಮಾತನಾಡಿದರು. ಜೆಡಿಕವಿ ಜ್ಯೋತಿ ರೂಪ್ಪಾಳೆ ನಿರೂಪಿಸಿದರು. ಕವಿ ಶ್ರೀಶೈಲ ಶಿರೂರ ಶರಣು ಸಮರ್ಪಿಸಿದರು.