ಬೆಳಗಾವಿ.ರಾಯಬಾಗ:~* ನಮ್ಮ ದೇಶದ ಹೃದಯ ಎನಿಸಿಕೊಂಡ ಸಂವಿಧಾನವು ರಾಷ್ಟ್ರೀಯ ಭಾವೈಕ್ಯತೆಯ ಪ್ರತಿಬಿಂಬವಾಗಿದೆ ಎಂದು ಅಥಣಿಯ ಕೆ.ಎ.ಲೋಕಾಪುರ ಪದವಿ ಕಾಲೇಜಿನ ಅಧ್ಯಾಪಕಿ ಪ್ರೊ.ಭಾಗ್ಯಶ್ರೀ ಗುಂಡಾ ಅಭಿಮತ ವ್ಯಕ್ತಪಡಿಸಿದರು.
ಅವರು ಶುಕ್ರವಾರ ದಿನಾಂಕ 23 ರಂದು ಕೆ.ಎಲ್.ಇ. ಸಂಸ್ಥೆಯ ವಾಣಿಜ್ಯ ಪದವಿ ಮಹಾವಿದ್ಯಾಲಯ ಶಿರಗುಪ್ಪಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ದತ್ತುಗ್ರಾಮ ಇಂಗಳಿಯಲ್ಲಿ ಹಮ್ಮಿಕೊಂಡ ವಾರ್ಷಿಕ ವಿಶೇಷ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ರಾಷ್ಟ್ರೀಯ ಭಾವೈಕ್ಯತೆಯಲ್ಲಿ ಯುವಕರ ಪಾತ್ರ ಕುರಿತು ಉಪನ್ಯಾಸ ನೀಡಿದರು. ನಮ್ಮ ಭಾರತೀಯ ಸಂವಿಧಾನವನ್ನು ತಾವೆಲ್ಲರೂ ಚೆನ್ನಾಗಿ ಅರ್ಥ ಮಾಡಿಕೊಂಡರೆ ಭಾವೈಕ್ಯತೆಯ ಮೂಲ ತತ್ವಗಳ ಅಡಿಯಲ್ಲಿಯೇ ನಮ್ಮ ಸಂವಿಧಾನ ನಿಂತಿದೆ ಎಂಬುದು ನಮಗೆ ತಿಳಿಯುತ್ತದೆ. ಎಂದು ಹೇಳಿದರು. ಪ್ರಬಲ ಇಚ್ಚಾಶಕ್ತಿ ಹಾಗೂ ಧನಾತ್ಮಕ ಚಿಂತನೆಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಂಡು ರಾಷ್ಟ್ರೀಯ ಐಕ್ಯತೆಗೆ ಕಟಿಬದ್ಧರಾಗಬೇಕು ಎಂದು ಕರೆ ನೀಡಿದರು.
ನಮ್ಮ ರಾಷ್ಟ್ರೀಯ ಹಬ್ಬ ಉತ್ಸವಗಳಲ್ಲಿ ಅಡಗಿರುವ ಮುಖ್ಯ ಆಶಯ ಸಹೋದರತೆ ಬ್ರಾತೃತ್ವವಾಗಿದೆ.ಪ್ರತಿಯೊಬ್ಬ ವಿದ್ಯಾರ್ಥಿಗಳು ಯುವ ಶಕ್ತಿಯ ಸ್ಫೂರ್ತಿಯಾದ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಯನ್ನು ಚೆನ್ನಾಗಿ ಅಧ್ಯಯನ ಮಾಡಿ ಒಳ್ಳೆಯ ನಾಗರಿಕರಾಗಿ ರೂಪುಗೊಂಡು ತಾವೆಲ್ಲರೂ ದೇಶದ ಏಕತೆಯನ್ನು ಎತ್ತಿಹಿಡಿಯಬೇಕು ಎಂದು ನುಡಿದರು. ಇದಕ್ಕೂ ಮೊದಲು ಆಗಮಿಸಿದ್ದ ಅತಿಥಿ, ಗಣ್ಯರು ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಉಪನ್ಯಾಸ ನೀಡಿದ ಪ್ರೊ.ಭಾಗ್ಯಶ್ರೀ ಗುಂಡಾ ಅವರನ್ನು ಎನ್. ಎಸ್.ಎಸ್.ಘಟಕದ ಪರವಾಗಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ನಂತರ ಶಿಬಿರಾರ್ಥಿಗಳು ಪ್ರೊ.ಭಾಗ್ಯಶ್ರೀ ಅವರಿಗೆ ನೆನಪಿನ ಕಾಣಿಕೆ ಸಮರ್ಪಿಸಿದರು.
ಘನ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ವಾಣಿಜ್ಯ ಉಪನ್ಯಾಸಕಿಯರಾದ ಪ್ರೊ.ರಾಧಿಕಾ ಯಾದವ ಅಧ್ಯಕ್ಷೀಯ ಆಶಯ ನುಡಿಗಳನ್ನು ಹಂಚಿಕೊಂಡರು.ಆರಂಭದಲ್ಲಿ ಕು. ಲಕ್ಷ್ಮಿ ಘೋಸರವಾಡೆ ರಾಷ್ಟ್ರೀಯ ಭಾವೈಕ್ಯತೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು. ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ರಾಮಗೌಡ ಎಂ. ಪಾಟೀಲ, ಶಿಬಿರಾಧಿಕಾರಿ ಶ್ರೀ ಎಂ.ಎಸ್.ಕೌಲಗುಡ್ಡ,ಸಹಾಯಕ ಶಿಬಿರಾಧಿಕಾರಿ ಪ್ರೊ.ಎಲ್.ಎಸ್.ವಂಟಮೂರೆ, ಕನ್ನಡ ಪ್ರಾಧ್ಯಾಪಕರಾದ ಡಾ.ಜಯವೀರ ಎ ಕೆ. ಹಾಗೂ ಮತ್ತಿತರ ಗಣ್ಯರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಕು.ಅಂಕಿತಾ ಫಿರಾಜೆ ಸ್ವಾಗತಿಸಿದರು.ಕು. ಲಕ್ಷ್ಮಿ ಘೋಸರವಾಡೆ ಹಾಗೂ ಕಾರ್ತಿಕ ಮಿರ್ಜೆ ಕಾರ್ಯಕ್ರಮ ನಿರೂಪಿಸಿದರು.ಕೊನೆಗೆ ಸ್ವಾತಿ ಪನದೆ ವಂದಿಸಿದರು.
ವರದಿ:~ಡಾ.ಜಯವೀರ ಎ.ಕೆ*.
*ಖೇಮಲಾಪುರ*





